Cinisuddi Fresh Cini News 

80ರ ದಶಕ ನೆನಪಿಸುವ “ದೂರದರ್ಶನ” ಚಿತ್ರದ ಟೈಟಲ್ ಟೀಸರ್ ಬಿಡುಗಡೆ

ಆ ಸಂಭ್ರಮವೇ ಬೇರೆ… ಇಡೀ ಊರಿಗೆ ಒಂದೇ ಒಂದು ಟಿವಿ ಇದ್ದ ಕಾಲವದ್ದು. ಆಗ ಇದ್ದದ್ದು ಒಂದೇ ಚಾನೆಲ್. ಅದು ದೂರದರ್ಶನ. ಆ ಕಾರ್ಯಕ್ರಮಗಳ ಬಗೆಗಿನ ಕುತೂಹಲ, ವಿದ್ಯುತ್ ಕೈಕೊಡದಿರಲಪ್ಪಾ ಎಂಬ ಪ್ರಾರ್ಥನೆ, ಜಾಹೀರಾತು ಬಂದಾಗ ಏರುತ್ತಿದ್ದ ಅಸಹನೆ… ಶಾಲೆಯಿಂದ ಬಂದ ತಕ್ಷಣ ಬ್ಯಾಗ್ ಎಸೆದು, ಇಡೀ ಊರಿನ ಮಂದಿ ಜೊತೆಗೂಡಿ ಕುಳಿತುಕೊಳ್ಳುತ್ತಿದ್ದ ಸಡಗರ ಧಾರಾವಾಹಿಗಳ ಖುಷಿ, ವಿವಿಧ ಮಾಹಿತಿ ಕಾರ್ಯಕ್ರಮಗಳು… ಎಲ್ಲವೂ ಮಧುರ…ನಮ್ಮ ನಿಮ್ಮ ಜೀವನದ ಈ ಹಳೆ ನೆನಪುಗಳ ಸುಂದರ ಯಾನದ ಒಂದು ನೋಟ ದೂರದರ್ಶನ ಸಿನಿಮಾ.

ಆರಂಭದಿಂದಲೂ ತನ್ನ ವಿಭಿನ್ನ ಕಥಾವಸ್ತು ಮೂಲಕ ಪ್ರೇಕ್ಷಕರ ಚಿತ್ತ ಸೆಳೆಯುತ್ತಿರುವ ದೂರದರ್ಶನ ಸಿನಿಮಾದ ಟೈಟಲ್ ಟೀಸರ್ ಅನಾವರಣಗೊಂಡಿದೆ. ಅದೊಂದು ಸುಂದರ ಗ್ರಾಮ. ಬೆಟ್ಟ, ಗುಡ್ಡ, ಹಸಿರನ್ನು ಹಾಸಿ ಹೊದ್ದಿರುವ, ಏನು ಇಲ್ಲದೇ ಇದ್ರೂ ಎಲ್ಲವೂ ದೊರಕುವ ಸಣ್ಣ ಪೇಟೆ. ನಾಟಕ, ಹರಿಕಥೆ, ಭಜನೆ, ವಾಲಿಬಾಲ್ ಇಷ್ಟೇ ಮನರಂಜನೆ ಎಂದುಕೊಂಡಾಗ ಎಂಟ್ರಿ ಕೊಟ್ಟಿದ್ದೇ ದೂರದರ್ಶನ. ಇಷ್ಟು ಅಂಶಗಳನ್ನು ಒಳಗೊಂಡ ಟೈಟಲ್ ಟೀಸರ್ ನೋಡುಗರನ್ನು ಆಕರ್ಷಿಸುತ್ತಿದೆ.

ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ನಿರ್ದೇಶಕ ಸುಕೇಶ್ ಶೆಟ್ಟಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸುಕೇಶ್ ಅವರಿಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಈ ಹಿಂದೆ ಅವರು ಸಂಭಾಷಣೆಕಾರರಾಗಿ, ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ದಿಯಾ ಸಿನಿಮಾ ಮೂಲಕ ಪ್ರೇಕ್ಷಕರ ಮನೆ ಮನ ಗೆದ್ದಿರುವ ಮಂಗಳೂರಿನ ಪ್ರತಿಭೆ ಪೃಥ್ವಿ ಅಂಬರ್‌ ದೂರದರ್ಶನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.

ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾಗೆ ರಾಜೇಶ್ ಭಟ್ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಉಗ್ರಂ ಮಂಜು ಜವಾಬ್ದಾರಿ ಹೊತ್ತಿದ್ದು, ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ ಸಂಗೀತ, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿಜಿ ಸಂಭಾಷಣೆ ಸಿನಿಮಾಕ್ಕಿದೆ.

Related posts